ಏಪ್ರಿ 28, 2020

ಕರೋನ ವೈರಸ್ ಲಸಿಕೆ ಹೇಗೆ ಕೆಲಸ ಮಾಡುತ್ತೆ ಗೊತ್ತಾ ?

ನನಗೂ ಗೊತ್ತಿಲ್ಲ.  ಆದ್ರೆ  TV9 ಗೆ ಗೊತ್ತಿದೆ, ನ್ಯೂಸ್ ನೋಡುತ್ತಿದ್ದವನು, ತಲೆ ಕೆಡಿಸ್ಕೊಂಡು ಬಂದು ಬ್ಲಾಗ್ ಬರೀತ್ತಿದ್ದೇನೆ .  (೪/೨೮/೨೦೨೦ :  ರಾತ್ರಿ ೯:೪೫ .... )

೧) ೧೦೦೦ ರುಪಾಯಿಗೆ ಲಸಿಕೆ ಮಾರಾಟ
೨) ಸೆಪ್ಟೆಂಬರ್ ವೇಳೆಗೆ ೪ ಕೋಟಿ  ಲಸಿಕೆ ತಯಾರು
೩) ಅದು ಕೆಲಸ ಮಾಡುವ ರೀತಿಯ ಸಂಪೂರ್ಣ ವಿವರ
೪) ಕಂಪನಿ ಮತ್ತು ಪ್ಯಾಕೇಜಿಂಗ್ ಡೀಟೇಲ್ಸ್ .

ವಾರ್ತೆ, ಕತೆ , ಜೀವ ಶಾಸ್ತ್ರದ  ಪಾಠ , ಜಾಹಿರಾತು  ಯಾವುದು ಅವಶ್ಯಕ ಯಾವುದು ಅನವಶ್ಯಕ, ಯಾವುದು ಏನು ಅಂತ ಗೊತ್ತೇ ಆಗುತ್ತಿಲ್ಲ .  ಎಲ್ಲಾನೂ  ನ್ಯೂಸೇ .

ಪಾಪ  ಈ ಚಾನೆಲ್ಲುಗಳಿಗೂ ಬೇರೆ ಸುದ್ದಿ ಇಲ್ಲ , ಬಡ್ಡಿ ಮಕ್ಳು , ಯಾಕೆ ಗೊತ್ತಾ ? ಏನು ಗೊತ್ತಾ? ಹೆಂಗೆ ಗೊತ್ತಾ ? , ಯಾರು ಗೊತ್ತಾ ? ಏನ್ಮಾಡಿದ್ರು ಗೊತ್ತಾ  ? ಜಾಹಿರಾತಿನ ನಂತರ , ೨೪ ಗಂಟೆ ಇದೆ ಗೋಳು .

ದೊರದರ್ಶನ ಚಾನೆಲ್  ಬುದ್ದಿವಂತಿಕೆ ತೋರಿಸಿದೆ , ಹಳೆಯ ಒಳ್ಳೆ ಕಾರ್ಯಕ್ರಮಗಳನ್ನ  ಮತ್ತೆ ಬಿತ್ತರಿಸುತ್ತಿದೆ .


ಮತ್ತೊಮ್ಮೆ ತೋರಿಸಬಹುದಾದ ಯಾವುದೇ  ಸಂವಾದ , ಸ್ಪರ್ಧೆ, ಚಿಂತನೆ , ವಾಚನ, ಪಠಣ , ಕಾರ್ಯಕ್ರಮಗಳನ್ನೂ ತಮ್ಮ ಜೀವಮಾನದಲ್ಲೇ ಮಾಡಿರದ ಚಾನೆಲ್ಲುಗಳು  ಲಾಕ್ ಡೌನ್  ಪರಿಸ್ಥಿತಿಯಲ್ಲಿ ಮಾಡಬಹುದಾದ  ಕೆಲಸ  ; ಕೇವಲ  ಹುಚ್ಚು ಹುಚ್ಚಾದ ಅರಚಾಟ . ೨೪ ಗಂಟೆ ಇನ್ನೇನಿದೆ.

ಮತ್ತೆ ನೋಡುವವರ ಕರ್ಮ .

ಮಾರ್ಚ್ 31, 2020

ಕರೋನ ಪ್ರಸಂಗ





ಕಳೆದುಕೊಂಡಿದ್ದ ಸಮಯವನ್ನು ಯಾರೋ ತಂದು ಕೈಗಿಟ್ಟಂತೆ,  ಸಂಪೂರ್ಣ ಖಾಸಗಿತನದ ಭಾಷೆ ಕೊಟ್ಟಂತೆ , ಮನೆಯಲ್ಲೇ ಕೆಲಸ ಮಾಡುವ ಕನಸನ್ನು ಕರುಣಿಸಿದಂತೆ , ಹೆಂಡತಿ ಮಕ್ಕಳೊಂದಿಗೆ ಇರುವ ಹಾಗೆ ಅನುಗ್ರಹಿಸಿದಂತೆ , ಇದ್ದಷ್ಟರಲ್ಲೇ ಇರುವ ಬುದ್ದಿ ಬಂದಂತೆ . ಷೇರು ಮಾರುಕಟ್ಟೆ ನಮಗಾಗಿ ಕೆಳಗಿಳಿದು ನಿಂತಂತೆ , ನಿವೃತ್ತಿಯ ನಂತರದ ಬದುಕಿನ ಮುನ್ನೋಟವನು ,ಕಾಲ ಇಂದೇ ತೋರಿಸುತ್ತಿರುವಂತೆ. ನೃತ್ಯ ,ಗಾನ, ನಿದ್ರಾದಿಗಳಿಗೆ  ದಿನ ಬೆಳೆದು ನಿಂತಂತೆ . ಕರೋನಾ ದಿಗ್ಬಂಧನದ ಮೊದಲ ಕೆಲವು ದಿನಗಳು.

ದಿನಗಳೆದಂತೆ ಜೀವ ಹಿಂಡುತ್ತಿರುವ ಖಾಸಗಿಯ ಏಕಾಂತ , ನಾವೇ ಮುರಿಯುತ್ತಿರುವ ಜೀವ ಸರಪಳಿಯ ಸಿದ್ದಾಂತ , ಜೊತೆಯಿರದೆ ಜೊತೆಗಿದ್ದ ಬದುಕುಗಳ ಬವಣೆ , ಪುರಸಭೆ ನೌಕರರು  ಮತ್ತು ಪೋಲೀಸರ ಬಗ್ಗೆ ಹೆಚ್ಚುತ್ತಿರುವ ಪ್ರೀತಿ ,ಗೌರವ .  ನಿಧಾನವಾಗಿ ಎಲ್ಲರನ್ನು ಆವರಿಸುತ್ತಿರುವ ಪರಸ್ಪರ ಅವಲಂಬನೆಯ ಬದುಕು . ಏನ ಮಾಡಿದರೇನು ಒಬ್ಬನೇ ಬದುಕಲಾಗದೆನ್ನುವ ಸತ್ಯ .  ಭಗವಂತನಾಟಕ್ಕೆ ಅಸಹಾಯಕನಾಗಿ ಬೆಳೆಯುತ್ತಿರುವ ಭಕ್ತಿ ಮತ್ತು ಆಧ್ಯಾತ್ಮ,  ಕರೋನ ಮಧ್ಯಂತರ .

ಬದುಕುವ ಆಸೆಗೆ ಬದುಕು ಕಳೆದುಕೊಳ್ಳುತ್ತಿದೇವೆಯೋ ಎನ್ನುವ ಶಂಕೆ , ಹೊರಗೆ ಕಾಲಿಡುವ ದಿನ ನೆನೆಸಿಕೊಂಡು ಆಗುತ್ತಿರುವ ಭಯ , ಹೊರ ಹೋಗಬಹುದೇ ಇನ್ಮುಂದೆ ಎನ್ನುವ ಆತಂಕ . ಸಮಾಜಮುಖಿಯಾಗಿ , ಸರಳವಾಗಿ , ನೈಸರ್ಗಿಕವಾಗಿ ಬದುಕನ್ನು ಅತ್ಯಂತ ಸಹಜವಾಗಿ ಅನುಭವಿಸಬೇಕು ಎನ್ನುವ ಹಂಬಲ .

ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಅರ್ಥ ವ್ಯವಸ್ಥೆಯ ಕಡೆಗೆ ಒಂದು ನೋಟ . ಆರ್ಥಿಕ ಹಿಂಜರಿತದಿಂದ ಆಗಬಹುದಾದ ನೌಕರಿ ಅನಾಹುತದ ಚಿಂತೆ,  ಉಳಿತಾಯವಾಗಿರುವ  ಹಣದ ಲೆಕ್ಕಾಚಾರ .  ತಡವಾಗಿ ತಲೆಗೆ ಕಾಲಿಟ್ಟಿರುವ ಉಳಿತಾಯದ ಬುದ್ದಿ ; ಕರೋನ ಸಿನಿಮಾ ಮುಕ್ತಾಯ .

ನೆನಪಾದ, ಕೂತು ತಿಂದರೆ ಕುಡಿಕೆ ಹೊನ್ನು ಸಾಲದೆನ್ನುವ  ಗಾದೆ, ಮತ್ತೆ ಜೊತೆಗಿರುವ ಸಾಲ ಭಾದೆ.
ತನು , ಮನ ದ ಭಯವನ್ನು ತುಳಿದು , ಮಲಗಿದ್ದ  ವಿಕ್ರಮಾದಿತ್ಯನನ್ನು ಒದ್ದು ಎಬ್ಬಿಸಿದ ಆಸೆ, ಕನಸು.  ಜಾಗೃತವಾದ ಛಲ ;. ಬಿಲ್ಲು  ಬೇತಾಳಗಳನ್ನು  ಹೊರಲು ಮತ್ತೆ ತಯಾರಾಗಿ ನಿಂತ ವೀರ .

ಎಂದಿನಂತೆ ನಡೆಯಲಿರುವ , ಬೇತಾಳದ ಕತೆಗಳು , ಪ್ರಶ್ನೋತ್ತರಗಳು  ಮತ್ತು ಜೀವನ ಚಕ್ರ .






ಈ ಬ್ಲಾಗ್ ಅನ್ನು ಹುಡುಕಿ