ಕಳೆದುಕೊಂಡಿದ್ದ ಸಮಯವನ್ನು ಯಾರೋ ತಂದು ಕೈಗಿಟ್ಟಂತೆ, ಸಂಪೂರ್ಣ ಖಾಸಗಿತನದ ಭಾಷೆ ಕೊಟ್ಟಂತೆ , ಮನೆಯಲ್ಲೇ ಕೆಲಸ ಮಾಡುವ ಕನಸನ್ನು ಕರುಣಿಸಿದಂತೆ , ಹೆಂಡತಿ ಮಕ್ಕಳೊಂದಿಗೆ ಇರುವ ಹಾಗೆ ಅನುಗ್ರಹಿಸಿದಂತೆ , ಇದ್ದಷ್ಟರಲ್ಲೇ ಇರುವ ಬುದ್ದಿ ಬಂದಂತೆ . ಷೇರು ಮಾರುಕಟ್ಟೆ ನಮಗಾಗಿ ಕೆಳಗಿಳಿದು ನಿಂತಂತೆ , ನಿವೃತ್ತಿಯ ನಂತರದ ಬದುಕಿನ ಮುನ್ನೋಟವನು ,ಕಾಲ ಇಂದೇ ತೋರಿಸುತ್ತಿರುವಂತೆ. ನೃತ್ಯ ,ಗಾನ, ನಿದ್ರಾದಿಗಳಿಗೆ ದಿನ ಬೆಳೆದು ನಿಂತಂತೆ . ಕರೋನಾ ದಿಗ್ಬಂಧನದ ಮೊದಲ ಕೆಲವು ದಿನಗಳು.
ದಿನಗಳೆದಂತೆ ಜೀವ ಹಿಂಡುತ್ತಿರುವ ಖಾಸಗಿಯ ಏಕಾಂತ , ನಾವೇ ಮುರಿಯುತ್ತಿರುವ ಜೀವ ಸರಪಳಿಯ ಸಿದ್ದಾಂತ , ಜೊತೆಯಿರದೆ ಜೊತೆಗಿದ್ದ ಬದುಕುಗಳ ಬವಣೆ , ಪುರಸಭೆ ನೌಕರರು ಮತ್ತು ಪೋಲೀಸರ ಬಗ್ಗೆ ಹೆಚ್ಚುತ್ತಿರುವ ಪ್ರೀತಿ ,ಗೌರವ . ನಿಧಾನವಾಗಿ ಎಲ್ಲರನ್ನು ಆವರಿಸುತ್ತಿರುವ ಪರಸ್ಪರ ಅವಲಂಬನೆಯ ಬದುಕು . ಏನ ಮಾಡಿದರೇನು ಒಬ್ಬನೇ ಬದುಕಲಾಗದೆನ್ನುವ ಸತ್ಯ . ಭಗವಂತನಾಟಕ್ಕೆ ಅಸಹಾಯಕನಾಗಿ ಬೆಳೆಯುತ್ತಿರುವ ಭಕ್ತಿ ಮತ್ತು ಆಧ್ಯಾತ್ಮ, ಕರೋನ ಮಧ್ಯಂತರ .
ಬದುಕುವ ಆಸೆಗೆ ಬದುಕು ಕಳೆದುಕೊಳ್ಳುತ್ತಿದೇವೆಯೋ ಎನ್ನುವ ಶಂಕೆ , ಹೊರಗೆ ಕಾಲಿಡುವ ದಿನ ನೆನೆಸಿಕೊಂಡು ಆಗುತ್ತಿರುವ ಭಯ , ಹೊರ ಹೋಗಬಹುದೇ ಇನ್ಮುಂದೆ ಎನ್ನುವ ಆತಂಕ . ಸಮಾಜಮುಖಿಯಾಗಿ , ಸರಳವಾಗಿ , ನೈಸರ್ಗಿಕವಾಗಿ ಬದುಕನ್ನು ಅತ್ಯಂತ ಸಹಜವಾಗಿ ಅನುಭವಿಸಬೇಕು ಎನ್ನುವ ಹಂಬಲ .
ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಅರ್ಥ ವ್ಯವಸ್ಥೆಯ ಕಡೆಗೆ ಒಂದು ನೋಟ . ಆರ್ಥಿಕ ಹಿಂಜರಿತದಿಂದ ಆಗಬಹುದಾದ ನೌಕರಿ ಅನಾಹುತದ ಚಿಂತೆ, ಉಳಿತಾಯವಾಗಿರುವ ಹಣದ ಲೆಕ್ಕಾಚಾರ . ತಡವಾಗಿ ತಲೆಗೆ ಕಾಲಿಟ್ಟಿರುವ ಉಳಿತಾಯದ ಬುದ್ದಿ ; ಕರೋನ ಸಿನಿಮಾ ಮುಕ್ತಾಯ .
ನೆನಪಾದ, ಕೂತು ತಿಂದರೆ ಕುಡಿಕೆ ಹೊನ್ನು ಸಾಲದೆನ್ನುವ ಗಾದೆ, ಮತ್ತೆ ಜೊತೆಗಿರುವ ಸಾಲ ಭಾದೆ.
ತನು , ಮನ ದ ಭಯವನ್ನು ತುಳಿದು , ಮಲಗಿದ್ದ ವಿಕ್ರಮಾದಿತ್ಯನನ್ನು ಒದ್ದು ಎಬ್ಬಿಸಿದ ಆಸೆ, ಕನಸು. ಜಾಗೃತವಾದ ಛಲ ;. ಬಿಲ್ಲು ಬೇತಾಳಗಳನ್ನು ಹೊರಲು ಮತ್ತೆ ತಯಾರಾಗಿ ನಿಂತ ವೀರ .
ಎಂದಿನಂತೆ ನಡೆಯಲಿರುವ , ಬೇತಾಳದ ಕತೆಗಳು , ಪ್ರಶ್ನೋತ್ತರಗಳು ಮತ್ತು ಜೀವನ ಚಕ್ರ .